Wednesday, December 22, 2010

ಈ ಧೈರ್ಯಕ್ಕೇ ಅದೇ ಕಾರಣವಾ...!?

 - ಅಶ್ವತ್ಥ ಕೋಡಗದ್ದೆ
ಹಾಯತ್ ನಗರದ ಬಸ್ ಸ್ಟ್ಯಾಂಡಿನಲ್ಲಿ ರಾತ್ರಿ 11 ಗಂಟೆಗೆ ಹೊತ್ತಿಗೆ ಏನು ಮಾಡೋದು ಅಂತಾ ಗೊತ್ತಾಗದೇ ನಿಂತಾಗ ನನಗೆ ಮೊದಲು ನೆನಪಾಗಿದ್ದು ಅಮ್ಮಾ, ಅಪ್ಪಯ್ಯಾ ನಾನು ಮನೆಲ್ಲೇ ಶಾಲೆಗೆ ಹೋಗ್ತಿ. ಉಂಚಳ್ಳಿಗೆ ಹೋಗ್ತಿಲ್ಲೆ ಅಂತಾ ನಾನು ಅತ್ತಿದ್ದು ಮತ್ತು ನನ್ನ ದೊಡ್ಡಪ್ಪ ಏನು ಮಾಡಿದ್ರೂ ಬಿಡದೇ ಸೈಕಲ್ ಮೇಲೆ ಕೂಡಿಸಿಕೊಂಡು ಕರೆದುಕೊಂಡು ಹೋಗಿದ್ದು.
ಹೌದು, ಒಂದನೇ ತರಗತಿ ಮುಗಿದಿತ್ತು. ಏಪ್ರಿಲ್-ಮೇ ರಜೆ ಎರಡು ತಿಂಗಳು ಉಂಡಾಡಿ ಗುಂಡನಾಗಿ ಕಳೆದಿದ್ದೆ. ಅಲ್ಲಿ ಇಲ್ಲಿ ನೆಂಟರ ಮನೆ ಸುತ್ತಿದ್ದು, ಚಾಲಿ ಕಣದಲ್ಲಿ ಓರಗೆಯವರ ಜೊತೆ ಆಡಿದ್ದು ಇದಿಷ್ಟರಲ್ಲೇ ಕಳೆದಿತ್ತು. ಎರಡನೇ ತರಗತಿ ಆರಂಭವಾಗಿ ಇನ್ನೂ ಒಂದು ವಾರ ಆಗಿರಲಿಲ್ಲ. ಸಂಜೆ ಶಾಲೆ ಬಿಟ್ಟು ಬಂದು ಆಡುತ್ತಿದ್ದವನಿಗೆ ಮನೆಯಿಂದ ಬುಲಾವ್ ಬಂದಿತ್ತು. ಏಕೆ ಸಂಜೆ ಆಗೋದ್ರೊಳಗೇ ಕರೀತಿದಾರೆ ಅಂತಾ ಹೋಗಿ ನೋಡಿದ್ರೆ ಮನೆ ಎದುರು ದೊಡ್ಡಪ್ಪನ ಸೈಕಲ್  ನಿಂತಿತ್ತು. ಮೊದಲೇ ನನಗೆ ದೊಡ್ಡಪ್ಪ ಅಂದ್ರೆ ಹಾವಿಗೆ ಬೇರು ತೋರಿಸಿದಂತೆ. ಭರ್ತಿ ಹೆದರಿಕೆ.
ಶಿರಸಿಯಿಂದ ಬನವಾಸಿ ಹೋಗುವಾಗ ಸಿಗುವ ಉಂಚಳ್ಳಿಯಲ್ಲಿ ಅವಾ ಪೋಸ್ಟ್ ಮಾಸ್ತರ್ ಕಮ್ ಪೋಸ್ಟ್ ಮೆನ್. ಅವಾ  ಮೂಲಮನೆ ಕೋಡಗದ್ದೆಗೆ ಬರೋದು 15 ದಿನಕ್ಕೋ ತಿಂಗಳಿಗೂ ಒಮ್ಮೊಮ್ಮೆ. ಅವಾ ಬಂದಾ ಅಂದ್ರೆ ನನ್ನ ಪುಂಗಿಯೆಲ್ಲಾ ಬಂದಾಗಿ ಬಿಡುತ್ತಿತ್ತು. ಉಳಿದ ದಿನಾ ಭರ್ಜರಿ ಕೇಕೆ ಹೊಡೆಯುತ್ತಿದ್ದ ನಾನು ಅಂದು ಇದ್ದೇನೋ ಇಲ್ಲವೋ ಅನ್ನುವಷ್ಟು ಗಪ್ ಚುಪ್. ಸರಿ, ಮನೆಯ ಒಳಗೆ ಹೋಗಿ ನೋಡ್ತೇನೆ ಒಂದೂ ಅರ್ಥಾ ಆಗ್ತಿಲ್ಲ. ನನ್ನ ಬಟ್ಟೆ ಬರೆಯನ್ನೆಲ್ಲಾ ಅಮ್ಮಾ ಬ್ಯಾಗ್ ಗೆ ತುಂಬ್ತಾ ಇದ್ಳು. ಅಪ್ಪಯ್ಯ ಅಲ್ಲಲ್ಲಿ ಹರಡಿಕೊಂಡಿದ್ದ ಪಾಟಿ ಪುಸ್ತಕಗಳನ್ನಾ ಚೀಲಕ್ಕೆ ಹಾಕ್ತಿದ್ದ.
ತಮ್ಮಾ ನೀನು ಶಾಲೆಗೆ ಹೋಪಲೆ ಉಂಚಳ್ಳಿಯಲ್ಲಿ ಇರು. ಅಪ್ಪಪ್ಪಾ ಕರಕೊಂಡು ಹೋಗ್ತಾ. ಹೋಗಿ ಕಾಲು-ಕೈ ತೊಳ್ಕಂಡು ಅಲ್ಲಿದ್ದಿದ್ದು ಅಂಗಿ-ಚಡ್ಡಿ ಹಾಕ್ಯ ಅಂದ್ಲು ಅಮ್ಮಾ. ನಾನು ದೊಡ್ಡದಾಗಿ ಅಳಲು ಶುರುಮಾಡಿಬಿಟ್ಟೆ... ಅಮ್ಮಾ, ಅಪ್ಪಯ್ಯಾ ನಾನು ಶಾಲೆಗೆ ಮನಿಂದನೇ ಹೋಗ್ತಿ. ಉಂಚಳ್ಳಿಗೆ ಹೋಗ್ತ್ನಿಲ್ಲೆ ಹೇಳಿ. ಹೊರಗೆಲ್ಲೋ ಇದ್ದ ದೊಡ್ಡಪ್ಪ ಬಂದವನೇ ಒಂದು ಸಲ ಕಣ್ಣು ಬಿಟ್ಟ ನೋಡಿ ನಾನು ಸುಮ್ಮನೇ ಹೋಗಿ ಕಾಲು-ಕೈ ತೊಳೆದು ಕೊಂಡು ಬಂದು ಸೈಕಲ್ ಹತ್ತಿ ಕುಳಿತಿದ್ದೆ. ಹಾಗೆ ಉಂಚಳ್ಳಿಗೆ ಹೊರಟಿತ್ತು ನನ್ನ ಸವಾರಿ. ಆದರೆ ಸೈಕಲ್ ನಲ್ಲಿ ಹಿಂದೆ ಕ್ಯಾರಿಯರ್ ಮೇಲೆ ಕುಳಿತ ನಾನು ದಾರಿಯುದ್ದಕ್ಕೂ ಅಳ್ತಾನೇ ಇದ್ದೆ. ಅಲ್ಲಿ ನಾನು 5 ವರ್ಷ ಶಾಲೆಗೆ ಹೋಗಿದ್ದು, ಹೊಡೆತ ತಿಂದಿದ್ದು, ಪತ್ರಗಳನ್ನು ಹಂಚಿದ್ದು, ಬಗೆಬಗೆಯ ಗೆಳೆಯರನ್ನು ಸಂಪಾದಿಸಿದ್ದು ಇವೆ ದೊಡ್ಡ ಕಥೆಯಾಗುತ್ತೇನೋ.
ಆದರೆ ಅಲ್ಲಿ ಇರುವಷ್ಟು ವರ್ಷ ಅದೆಷ್ಟು ಕಷ್ಟಪಟ್ಟೆನೋ, ಸುಖ ಪಟ್ಟೆನೋ ಅದನ್ನೆಲ್ಲ ಅತ್ತೊಟ್ಟಿಗಿಟ್ಟು ನೋಡಿದರೆ ನಾನು ಒಂದು ವಿಷಯವನ್ನಂತೂ ಕಲಿತಿದ್ದೆ. ಅದೇ ಧೈರ್ಯ... ಯಾವ ಊರಿನಲ್ಲಿ ಒಬ್ಬನನ್ನೇ ಕರೆದುಕೊಂಡು ಹೋಗಿ ಬಿಟ್ಟರೂ ಬದುಕಬಲ್ಲೆ ಅನ್ನೋ ವಿಶ್ವಾಸ ಮೂಡಿದ್ದು ಅಲ್ಲೇ. ಎರಡನೇ ತರಗತಿ ವೇಳೆಗೆ ಒಬ್ಬನೇ ಅಲ್ಲಿಂದ ಶಿರಸಿಗೆ ಹೋಗಿ ಮನೆಗೆ ಬೇಕಾದ ಸಣ್ಣಪುಟ್ಟ ಸಾಮಾನು ತರುವಷ್ಟು ಧೈರ್ಯ ನನ್ನಲ್ಲಿ ಮೂಡಿಬಿಟ್ಟಿತ್ತು. ಹಾಗೆ ಶಿರಸಿಗೆ ಹೋಗುವಾಗಲೆಲ್ಲ ಉಂಚಳ್ಳಿಯಿಂದ ನಾನು ಬಸ್ಸಿಗೆ ಹೋದದ್ದಕ್ಕಿಂತ ಹಾಲಿನ ವ್ಯಾನಿಗೆ ಹೋಗಿದ್ದೇ ಹೆಚ್ಚು. ಸುಮಾರು 15 ಕಿಲೋಮೀಟರ್ ದೂರದ ಶಿರಸಿಗೆ ಕೇವಲ 2 ರೂಪಾಯಿ ಕೊಟ್ರೆ ಆಯ್ತು. ಪೋಸ್ಟ್ ಮಾಸ್ತರ್ ಮನೆ ಮಾಣಿ ಅನ್ನೋ ಕಾರಣಕ್ಕೆ ವ್ಯಾನಿನಲ್ಲಿ ಮುಂದೆ ಕುಳ್ಳಿರಿಸಿಕೊಂಡು ಹೋಗ್ತಿದ್ರು. ಮಾರಿಗುಡಿಗಿಂತ ಸ್ವಲ್ಪ ಹಿಂದೆ ಇಳಿಸ್ತಿದ್ರು. ಎನೇನು ಬೇಕೋ ಅದನ್ನೆಲ್ಲಾ ತಗಂಡು ಬರ್ತಿದ್ದೆ. ಪೇಟೆಯಲ್ಲಿ ಓಡಾಡೋದೇನು ಮಹಾ ಕಷ್ಟ ಅಲ್ಲಾ ಅಂತಾ ಗೊತ್ತಾದದ್ದೂ ನನಗೆ ಅವಾಗಲೇ.
ಡಿಗ್ರಿ ಮುಗಿದು, ಈಟಿವಿಯಲ್ಲಿ ಕೆಲಸ ಅಂತಾ ಸಿಕ್ಕು ಹೈದರಾಬಾದ್ ಗೆ ಹೋಗಬೇಕಾಗಿ ಬಂದಾಗ ನಮ್ಮನೆಯಲ್ಲಿ ಉಳಿದವರೆಗೆ ಸ್ವಲ್ಪ ಹೆದರಿಕೆ ಇತ್ತು. ಒಬ್ಬನೇ ಹೋಗೋದು, ಅಲ್ಲಿ ಉಳಿಯುವುದಕ್ಕೆ ಹೇಗೋ, ಅಲ್ಲಿನ ಭಾಷೆ ಬೇರೆ ಬರೋಲ್ಲ, ಪರಿಚಯದವರು ಬಹಳ ಇಲ್ಲ ಅಂತಾ. ಮೊದಲಿಂದನೂ ಜರ್ನಲಿಸಂ ಅಂದ್ರೆ ಕಣ್ಣರಳಿಸುತ್ತಿದ್ದ ನಾನು ಈಟಿವಿ ಅಂದ್ರೆ  ಬಿಟ್ಕೊಳ್ತೇನ್ಯೆ. ದಿನಾ ಮನೆಲ್ಲಿ ಕುಳಿತು ನೋಡುತ್ತಿದ್ದ ಚಾನೆಲ್ ನಲ್ಲಿ ಕೆಲಸ ಅಂದ್ರೆ ಸುಮ್ನೆ ಮಾತಾ ? ಸರಿ ಗಂಟುಮೂಟೆ ಕಟ್ಗೊಂಡು ಹೋಗಿ ಒಂದು ಬೆಳಿಗ್ಗೆ ಹೈದರಾಬಾದ್ ನಲ್ಲಿ ಇಳಿದುಬಿಟ್ಟೆ.
ಹಾಗೂ ಹೀಗೂ ಯಾವುದೋ ದೂರದ ನೆಂಟರ ಪರಿಚಯ ಸಿಕ್ಕಿತ್ತು. ಹೋಗಿ ಲಗೇಜ್ ಇಟ್ಟು ಅಲ್ಲಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದ್ದ ರಾಮೋಜಿ ಫಿಲ್ಮ್ ಸಿಟಿನಲ್ಲಿ ಇರೋ ಆಫೀಸ್ ನಲ್ಲಿ ಕೆಲಸಕ್ಕೆ ಜೊಯ್ನ್ ಆದೆ. ಹೊಸ ರೂಮು ಹುಡುಕೋ ತನಕಾ ಅಲ್ಲೇ ಹತ್ತಿರದಲ್ಲಿ ಇರೋ ಯು ಕೆ ಗುಡಾ ಎಂಬಲ್ಲಿ ಉಳಿಯೋದಕ್ಕೆ ಅವರೇ ವ್ಯವಸ್ಥೆ ಮಾಡಿದ್ರು. ಆದ್ರೆ ಲಗೇಜ್  ಸಿಟಿನಲ್ಲಿ ಇತ್ತಲ್ಲಾ. ಅದನ್ನೊಂದು ತರ್ಬೇಕು ಅಂತಾ ಹೈದರಾಬಾದ್ ಗೆ ವಾಪಸ್ ಹೋದೆ. ಅಲ್ಲಿಂದ ಲಗೇಜ್ ತಗೊಂಡು ಹೊರಡೋದೇ 7 ಗಂಟೆ ಆಗ್ಬಿಟ್ಟಿತ್ತು. ಯು ಕೆ ಗುಡಾ ಹೋಗ್ಬೇಕು ಅಂದ್ರೆ ಕೋಟಿ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಬೇಕು. ಅಲ್ಲಿ 9-30 ಆದ್ರೂ ಬಸ್ ಸಿಗಲೇ ಇಲ್ಲಾ. ಯಾಕೋ ಯಡವಟ್ಟಾಯ್ತು ಅಂತಾ ಅನ್ನಿಸೋಕೆ  ಶುರುವಾಯ್ತು. ಕೈಯಲ್ಲಿ ಒಂದು ಬ್ಯಾಗು, ಸೂಟ್ಕೇಸ್. 5 ಸಾವಿರ ರೂಪಾಯಿ ಬೇರೆ ಇತ್ತು..  
ಯಾರನ್ನೋ ಮಾತಾಡ್ಸಿ ಹಾಗೂ ಹೀಗೂ ಕೋಟಿಯಿಂದ ಹಾಯತ್ ನಗರದ ವರೆಗೆ ಬಸ್ ಹಿಡ್ಕಂಡು ಹೋಗಿ ಮುಟ್ಟಿಕೊಂಡಿದ್ದೆ. ಆಗ್ಲೇ ರಾತ್ರಿ 11 ಗಂಟೆ ಆಗ್ಬಿಟ್ಟಿತ್ತು. ಆದ್ರೆ ಅಲ್ಲಿಂದ ಇನ್ನೂ ಮುಂದು 15 ಕಿಲೋಮೀಟರ್ ಹೋಗ್ಬೇಕಲ್ಲಾ. ಆಟೋ ಮಾಡಿಸಿಕೊಂಡು ಹೋಗಿ ಒಂದು ವೇಳೆ ಕೈಯ್ಯಲ್ಲಿದ್ದಷ್ಟು ದುಡ್ಡು ಕಸ್ಗಂಡು ಕಳಿಸಿಬಿಟ್ರೆ ಅಂತಾ. ಆದ್ರೋ ಹೋಗಿ ಮುಟ್ತೇನೆ ಅನ್ನೋ ಧೈರ್ಯ ಇತ್ತು. ಹೋಗಿ ಮುಟ್ಟಿದೆ ಕೂಡ. ಗೊತ್ತಿಲ್ಲದ ಊರಿನಲ್ಲಿ ನಡು ರಾತ್ರಿಯಲ್ಲಿ ಆ ಧೈರ್ಯ ನನಗೆ ಬಂದದ್ದು ಉಂಚಳ್ಳಿಯಲ್ಲಿ ಇದ್ದಾಗ ಶಿರಸಿಯಲ್ಲಿ ಓಡಾಡಿದ ಅನುಭವದಿಂದ.
ಒಂದೊಮ್ಮೆ ನಾನು ಉಂಚಳ್ಳಿಯಲ್ಲಿ ಶಾಲೆಗೆ ಹೋಗೋದಿಕ್ಕೆ ಇಲ್ದಿದ್ರೆ ಅಷ್ಟು ಧೈರ್ಯ ಬರ್ತಿತ್ತಾ..? ಮನೆಗುಬ್ಬಿಯಾಗಿ ಬಿಡ್ತಿದ್ನಾ..? ಒಬ್ಬನೇ ಹೈದರಾಬಾದ್ ನಲ್ಲಿ ಆ ರಾತ್ರಿ ಯು ಕೆ ಗುಡಾ ಹುಡುಕಿಕೊಂಡು ಹೋಗ್ತಿದ್ನಾ…?’ ಗೊತ್ತಿಲ್ಲ.  ಇವತ್ತೂ ಅದನ್ನೇ ಯೋಚಿಸ್ತಿದ್ದೇನೆ.

4 comments:

  1. hi, u made me to remember our school days...

    ReplyDelete
  2. ಹೌದು ನವೀನ್ ಅಲ್ಲಿ ನಾನಿದ್ದಾಗಿನ ಒಂದೊಂದು ದಿನವೂ ನೆನಪಿದ್ದು. ಆ ಶಾಲೆ, ನಮಗೆ ಚಾಕಲೇಟ್ ಕೊಡೋ ಶಾರದಕ್ಕೋರು, ನಮ್ಮಿಬ್ಬರ ಜಗಳ, ಮಾತು ಬಿಟ್ಟುಕೊಂಡಿದ್ದು... ಹೀಗೇ ಅದೆಲ್ಲದೂ ಮರೆತಿದ್ದಿಲ್ಲೆ. ಅದನ್ನೆಲ್ಲಾ ಇನ್ನೊಂದು ಸಲ ಬರಿತಿ

    ReplyDelete
  3. Ashwatha purana chennagittu, jotegondishtu Bhagavatha purana edre maja erutte. 2ne sanchikeyalli adu... erali.
    Yogesh.D.E

    ReplyDelete
  4. ಹೇ. ಚೆನ್ನಾಗಿದ್ದು.. ಬೆಳೆಯೋ ಸಿರಿ ಮೊಳಕೆಯಲ್ಲಿಯೇ ಹೇಳ ತರ ಆತಲ ಇದು .. ಬಾಲ್ಯದಲ್ಲಿ ಕಲ್ತಿದ್ದು ಆಮೇಲೆ ಎಲ್ಲೆಲ್ಲಿ ಉಪಯೋಗಕ್ಕೆ ಬತ್ತು ನೋಡಿ :-)

    ReplyDelete